Thursday, July 02, 2015


ರಕ್ತ ಜೇನು 
====== 
ಇದೋ ನನ್ನ ಹೃದಯದಲಿ 
ಹೆಜ್ಜೇನ ಗೂಡು. 
ಅಲ್ಲಿರುವ ಆಸೆಗಳ ಬದಿಗಿರಿಸಿ.. 
ಒತ್ತರಿಸುವ ದುಃಖವ 
ಹೆಪ್ಪು ಗಟ್ಟಿಸಿ... 
ಕೋಟಿ ಕಲ್ಪನೆಗಳ ಕರೆದು 
ಝಾಡಿಸಿ... 
ಜೇನು ಹುಳುವಾಗಿ 
ಪರಿವರ್ತಿಸಿರುವೆ.
ಮಾನಸ ಸರೋವರದ 
ತಟದಲ್ಲೇ ನನ್ನ ಕನಸುಗಳ 
ಪುಷ್ಪಲೋಕ ಬೆಳೆಸಿದ್ದೆ.. ಗೊತ್ತಲ್ಲ? 
ಅಲ್ಲಿಗೆ ಜೇನು ಹುಳುಗಳ ಅಟ್ಟಿದ್ದೆ 
ಅಲ್ಲಿನಷ್ಟೂ ಪುಷ್ಪಗಳ ಮಧುವನ್ನು ಹೀರಿ 
ಹಾರಿ ಬಂದಿವೆ ... ನನ್ನ ಮಾತು ಚಾಚೂ ತಪ್ಪದೆ...
ಪೋಣಿಸಿಯೇ ಬಿಟ್ಟಿವೆ ನೋಡು ಅದೆಂಥ 
ಅದ್ಭುತ ಜೇನ್ಗೂಡನ್ನು ನನ್ನೀ ಕಲ್ಪನೆಗಳು 
ಅರ್ಥಾತ್ ಜೇನು ಹುಳುಗಳು! 
ಕೋಟಿ ಹುಳುಗಳು ಒಮ್ಮೆಲೇ ದಾಳಿ ಮಾಡಿವೆ 
ಕೋಟಿ ಮುಳ್ಳುಗಳ ಹೃದಯಕ್ಕೆ ಒಮ್ಮೆಲೇ ಚುಚ್ಚಿವೆ
ಫಲಿತಾಂಶ: 
ನಿನಗಾಗಿಯೆ ಮೊಗೆ ಮೊಗೆದು ಕೊಡಲು 
ಬತ್ತಲಾರದಷ್ಟು ಪ್ರೀತಿ ಜೇನು 
ಜೊತೆಗೇ.. 
ವಿಹ್ವಲಗೊಂಡ ಹೃದಯದ ರಕ್ತಸ್ರಾವ 
ಪರಿಣಾಮದ ಪರಿಮಾಣ ಅರಿಯೆ
ಪ್ರೀತಿ ಜೇನನ್ನು ರಕ್ತಸ್ರಾವದ ನೋವನ್ನು
ಬಸಿದು ಸೋತಿರುವೆ.
ಬದುಕುಳಿವ ಮಾತು ಕನಸಷ್ಟೆ
ಇನ್ನುಳಿದಿರುವುದು ನಿನ್ನ ಕೆಲಸ.
ಬಾ... ನಡೆದು ಹೋಗಲಿ ಈಗಲೇ 
ನಿನ್ನ ಹೆಜ್ಜೇನ ಬೇಟೆ 
ನನ್ನೀ ಹೃದಯದ ಮೇಲೆ 
ಇರಿಯ ಬೇಕಿಲ್ಲ ಹೃದಯವನ್ನು 
ತರಬೇಕಿಲ್ಲ ಬೆಂಕಿ ಪಂಜನ್ನು 
ಸುಮ್ಮನೆ ಕೈ ಹಾಕು 
ಜಿನುಗಬಹುದು ರಕ್ತ ಜೇನು.
 ವೃತ್ತ:
 ======
ತನ್ನ ವೃತ್ತಾಂತದ ಅರ್ಥವೇ ತಿಳಿಯದೆ 
ಗುಂಡಾಗಿದೆ ಇದು. 
ತಾನಾಗೆ ಮೂಡಿದ್ದೋ ?
ಯಾರೋ ಸುತ್ತಿದ್ದೋ ?
ಎಂಬ ಉತ್ತರದ 
ಜ್ಞಾನೋದಯವಾದ ನೆನಪೇ ಅದಕಿಲ್ಲ 
ಹುಡುಕಾಟ ಹೀಗೆ ಸಾಗಿದೆ...
ತಾನು ಸಂಪೂರ್ಣನೋ ... 
ಪರಿಪುರ್ಣನೋ .... 
ಅರ್ಥಪೂರ್ಣನೋ .... 
ಯಾರೂ ತಿಳಿ ಹೇಳುವರಿಲ್ಲ.
ದುಂಡಾಗಿರುವ ಕಾರಣ ಕುರೂಪಿಯಂತೂ ಅಲ್ಲ 
ಅದಷ್ಟೇ ಕಾರಣಕ್ಕೆ ಸುಂದರನೂ ಅಲ್ಲ!
ಎರಡೂ ಬಿಂದು ಪರಸ್ಪರ ಸ್ಪರ್ಶಿಸಿರುವ ಕಾರಣ 
ಪರಿಪೂರ್ಣ ಎಂದುಕೊಂಡರೂ 
ಪರಿಧಿಯೊಳಗಿನ ಜಾಗ ಶಾಶ್ವತವಾಗಿ ಖಾಲಿಯಾಗಿದೆ 
ತುಂಬಲಾರದ ಶೂನ್ಯದಂತೆ... 
ತಾನು ಸುತ್ತುತ್ತಲೂ ಇಲ್ಲ 
ಚಲಿಸುತ್ತಲೂ ಇಲ್ಲ 
ಆ ಕಾರಣ.. 
ಅರ್ಥಪೂರ್ಣನೂ ಅಲ್ಲ.
ಸದ್ಯಕ್ಕೆ ತಾನೊಂದು ವಿಕಾರವಾಗಿರದ 
ಆಕಾರವೆಂದಷ್ಟೇ ಗೊತ್ತು 
ಅದರ ವ್ಯಾಸ ಅಳತೆಗೋಲಿಗೆ ಸಿಗದಷ್ಟಿದೆ 
ತನ್ನ ಪರಿಧಿಯು ಸುತ್ತಲೂ ಒಂದೇ ರೀತಿ 
ಕಾಣುವುದರಿಂದ 
ತಾನಾವ ದಿಕ್ಕಿನತ್ತ ದಿಟ್ಟಿಸುತ್ತಿದ್ದೇನೆ 
ಎಂಬುದೂ ತಿಳಿದಿಲ್ಲ.
ತನ್ನ ವ್ಯಾಸದಷ್ಟೇ ಅದರ ಲೋಕ 
ತನ್ನ ಪರಿಧಿಯಲ್ಲೇ ಅದು ಮೂಕ.

Sunday, September 30, 2012

ದೃಷ್ಟಿಕೋನ

ತಕರಾರಿರುವುದು ಪುಣ್ಯಕೋಟಿಯ


ಸತ್ಯ ಸಂಧತೆಯಲ್ಲ

ಪುಣ್ಯವಂತೆ ಆ ಆಕಳು....

ಮನಸನ್ನು ಘಾಸಿ ಗೊಳಿಸಿದ್ದು

ಹುಲಿರಾಯನ ದಾರುಣ ಸಾವು...

ಎಂಥ ಪಾಪದ ಹುಲಿಯು ಇದು

ಹುಲಿ ಹುಲ್ಲನ್ನು ಮೇದೀತೆ?

ಪುಣ್ಯಕೋಟಿಯ ಬೇಟೆಯಾಡಲು

ಹುಲಿಗೆ ಪ್ರಾಕೃತಿಕ ಹಕ್ಕಿತ್ತು...



ಪುಣ್ಯಕೋಟಿಯೇನೋ ತನ್ನ ಮಾತು ಉಳಿಸಿಕೊಂತು

ಹುಲಿ ಕರುಣೆಗೆ ಕಟ್ಟುಬಿದ್ದು ತನ್ನ ತಾನೇ ಕೊಂದುಕೊಂತು

ಸರಿ-ತಪ್ಪು ಯಾರದೂ ಅಲ್ಲ..

ಹಸುವಿಗೆ ಹುಲ್ಲು

ಹುಲಿಗೆ ಹಸುವು

ಎಲ್ಲವೂ ಹಸಿವೆಗೆ ....



ಕಥೆ ಕೇಳುವ ನಮಗೆ

ಆಕಳು ಮತ್ತು ಕರುವಿನ ಬಗ್ಗೆ ಅನುಕಂಪ...

ಹುಲಿಯ ವರ್ತನೆ ಭೀಬತ್ಸ!

ಕೊನೆಗೆ...

ಪುಣ್ಯಕೋಟಿಯ ಸತ್ಯಮೇವ ಜಯತೆ ಸಂದೇಶ...

ಕಣ್ಮರೆ ಯಾಗುವ ಹುಲಿಯ ತ್ಯಾಗ,

ಹಾಗು ಪುಣ್ಯಕೋಟಿ ಬಗ್ಗೆ

ನೆಮ್ಮದಿಯ ನಿಟ್ಟುಸಿರು...





"ಎನ್ನ ಒಡಹುಟ್ಟಕ್ಕ ನೀನು"

ಎಂದ ವ್ಯಾಘ್ರ ನ ಸಾವು ನ್ಯಾಯವೇ..?

ಆರು ನಮಗೆ ಹಿತವರು...?



ಜೀವ ಎಲ್ಲರಿಗೂ ಒಂದೇ....

ತದ್ವಿರುದ್ಧ - ಹನಿಗವನಗಳು

ತದ್ವಿರುದ್ಧ - ಹನಿಗವನಗಳು




******



ವರ್ಷಧಾರೆ ಸುರಿದರೂ

ಹಣೆಯ ಬೆವರು ಬಿದ್ದರೂ

ಉತ್ತಿ - ಬಿತ್ತಿದ ಕಾಯಕ ಕಡೆಗಣಿಸಿ..

ಫಲ ನೀಡದೆ ನಿರುತ್ತರಳಾದಳು ಭೂಮಿ..





******



ಯಾರೂ ತಿಳಿಯದ..

ಯಾರೂ ತುಳಿಯದ

ಹಾದಿಯು ತಂತಾನೇ ಮುಂದೆ ಸಾಗುತಿದೆ

ಯಾರಿಗೂ ಸಿಗದೇ...



******



ಜಾಲಿ ಗಿಡದ ಸುಂದರ ಮುಳ್ಳು

ಬಿಸಿಲ ಹಬೆ ತಾಳದೆ ಅಳುತಿರಲು

ಪ್ರೀತಿ ಹೃದಯವು ಮುಳ್ಳಿನ ಮೇಲೆ ಬಿತ್ತು..

ಮುಳ್ಳು ತಂಪಾಯ್ತು ..

ಹೃದಯ ಸತ್ತು ಹೋಯ್ತು...



******



ಹೆಣ್ಣೊಬ್ಬಳ

ಕಣ್ಣೀರು ನಗುತ್ತಿತ್ತು !

ಕಣ್ಣ ಬಂಧನ ಬಿಡಿಸಿಕೊಂಡಾಗ

ಅವಳ ನಗುವು ಅಳುತ್ತಿತ್ತು!

ತುಟಿಯಂಚಿನಿಂದ ಹೊರ ಹಾಕಿದಾಗ



******



ಪ್ರಶ್ನೆಯೊಂದು ಪ್ರಶ್ನೆಯಾಗಿಯೇ ಇದೆ

ಉತ್ತರ ಸಿಗದೇ

ಉತ್ತರವೊಂದು ಮತ್ತೆ ಪ್ರಶ್ನೆಯಾಗಿದೆ

ಅರ್ಥವೇ ಆಗದೆ... !





******



ಮನಸು ಕಿವುಡು... ಹೃದಯದ ಮಿಡಿತಕೆ

ಭಾವ ಕುರುಡು... ಮನಸಿನ ಕುಣಿತಕೆ

ಹೃದಯ ಮೂಕ.... ಭಾವದ ನೋವಿಗೆ..

Thursday, April 01, 2010

ಕವನದ ಆಕ್ರಂದನ


ಇದು ಪುಟ್ಟ ಕವನ...
ಅದರೊಳಗೇ
ಬಚ್ಚಿಟ್ಟುಕೊಂಡಿದೆ..
ತನ್ನ ಮೌನ ಆಕ್ರಂದನ...
ನಾಲ್ಕೇ ಸಾಲುಗಳ
ಅಪಕ್ವ ವೆನಿಸುವ ನುಡಿಗಳು..
ಆದರೂ.. ತನ್ನೊಳಗೆ..
ಅಡಗಿಸಿದ
ಯಾರೂ ಅರ್ಥೈಸದ ...
ಯಾರಿಗೂ ಬೇಡದ
ಸಾವಿರಾರು..
ಪರಿಪಕ್ವ ವಿಚಾರಗಳ..
ಕೋಟ್ಯಾಂತರ ನಿಟ್ಟುಸಿರುಗಳ
ಒಳಗೊಂಡ ಪುಟ್ಟ ಕವನ..
ಜೊತೆಗೆ ತನ್ನ ಮೌನ ಆಕ್ರಂದನ..
ತುಟಿಯಾಚೆ ಬಾರದೆ...
ಮನದೊಳಗೆ ಕೂರದೆ...
ಸದ್ದೇ ಮಾಡದಂತೆ
ಇದ್ದೂ ಇಲ್ಲದಂತೆ...
ಇಲ್ಲದೆಯೂ ಇರುವಂತೆ...
ತನ್ನ ಅಸ್ತಿತ್ವವನ್ನೇ..
ಪ್ರಶ್ನಿಸಿಕೊಳ್ಳುವ ಕವನ..!
ಅಗೋಚರ ಪದಗಳ..
ಅಚ್ಚರಿಯ ಅರ್ಥಗಳ..
ಒಮ್ಮೆಲೇ.. ಒಳಗೊಂಡ ಪುಟ್ಟ ಕವನ..
ಜೊತೆಗೆ ತನ್ನ ಮೌನ ಆಕ್ರಂದನ....

Tuesday, February 09, 2010

ಕೇವಲ ನೆನಪಿಗಾಗಿ..

ಮನವೇ ಪ್ರಕೃತಿ..
ಆಗಸವೇ ನಿರೀಕ್ಷೆ...
ಭಾವವೇ ಸಾಗರ
ಕನಸಿನ ತೀರದಲ್ಲೇ
ಆಸೆಗಳ
ಮರಳ ಗೂಡು...
ಕಲ್ಪನೆಗಳೇ
ಆಗಾಗ ಮೂಡುವ
ಅಲೆಗಳಂತೆ....


ಎಲ್ಲವೂ ಸರಿ ಇದ್ದರೆ...
ಮನದ ಪ್ರಕೃತಿ
ನಗುತಲೇ ಇದ್ದರೆ...
ಆಸೆಗಳ ಮರಳ ಗೂಡು
ಹಾಗೇ ಉಳಿಯಬಹುದು
ಎಂದಿಗೂ ಅಳಿಯದ
ನೆನಪಿನ ಕೃತಿಯಾಗಿ...


ಅಕಸ್ಮಾತ್...
ಮನದ ಪ್ರಕೃತಿ ಮುನಿದು....
ಭಾವಗಳ ಸಾಗರ
ಹುಚ್ಚಾಗಿ ಕುಣಿದು...
ಕಲ್ಪನೆಗಳ ಸುನಾಮಿ ಅಲೆಗಳು..
ಭೋರ್ಗರೆದು ಅಪ್ಪಳಿಸಿದರೆ...
ಆಸೆಗಳ ಮರಳ ಗೂಡು
ಕೊಚ್ಚಿ ಹೋಗಬಹುದು...
ಅಳಿದು ಹೋಗಿ
ಕಾಡಬಹುದು..
ಕೇವಲ ನೆನಪಾಗಿ... !


ಕೊನೆಗೆ ....
ಉಳಿಯುವುದು...
ಆಗಸವೆಂಬ ನಿರೀಕ್ಷೆ ಮಾತ್ರ...
ಆಗಸ ಎಂದಿಗೂ ಅಳಿಯದ ಅಚ್ಚರಿ...
ಮತ್ತೆ ಮರಳ ಗೂಡು ಕಟ್ಟಬೇಕೆ... ?
ಪ್ರಕೃತಿ ಸಿದ್ಧಳಾಗುವ ವರೆಗೂ ಕಾಯಬೇಕು ...
ಅಲ್ಲಿಯವರೆಗೂ...
ನಿರೀಕ್ಷೆಯ ಆಗಸವನ್ನೇ ನೋಡಬೇಕು..
ಕೇವಲ ನೆನಪಿಗಾಗಿ..

Tuesday, December 15, 2009

ಹಾಡು ನನ್ನ ಚರಮ ಗೀತೆ..

ಈ ಜೀವ ದೇಹದಿಂದ ಹಾರಲು
ಆತ್ಮ ಚಿತೆಯಿಂದ ಹೊರಡಲು
ನಾಚುವಂತೆ..
ನನ್ನದೇ ಕವಿತೆ..
ಹಾಡು ನನ್ನ ಚರಮ ಗೀತೆ..

ತಣಿಯಲಿ ಈ ಆತ್ಮ
ಕುಣಿಯಲಿ ಎನ್ನ ಚೇತನ..
ಹರಿಯುವಂತೆ...
ಸುಪ್ತ ಸರಿತೆ..
ಹಾಡು ನನ್ನ ಚರಮ ಗೀತೆ...

ಬದುಕಿಗೆ ಅರ್ಥ ಬರುವಂತೆ ...
ಕೆದಕಿದ ನೋವು ಸುಡುವಂತೆ..
ಮೂಡುವಂತೆ..
ಹೊಸ ಚರಿತೆ...
ಹಾಡು ನನ್ನ ಚರಮ ಗೀತೆ..

ಅಂತರಾತ್ಮ ಅರಿವಂತೆ..
ತಪ್ತ ಭಾವದ ಕುರಿತಂತೆ..
ಈ ಬಾಳ ಜಂಜಾಟದ...
ಒಗಟು ಬಿಡಿಸುವಂತೆ..
ಹಾಡು ನನ್ನ ಚರಮ ಗೀತೆ....

ಈ ಆತ್ಮ ಜನ್ಮ ತಳೆವಂತೆ...
ಮತ್ತೆ ಎಲ್ಲೋ ಹುಟ್ಟಿ ಬೆಳೆವಂತೆ..
ಹರಸಿ ಕೂಗು ....
ಮತ್ತೆ ಮತ್ತೆ....
ಹಾಡು ನನ್ನ ಚರಮ ಗೀತೆ..!

Tuesday, November 03, 2009

ನೀ ನನಗೆ ... ನಾ ನಿನಗೆ...

ನಿನ್ನೊಳಗೆ ನಾನಾಗಿ
ನನ್ನ ನಾ ನಿನಗಾಗಿ
ನೀಡಿ
ನಿನ್ನಲ್ಲೇ ನರ್ತಿಸುವೆ
ನಿನ್ನೋಲವೇ ನಾನಾಗುವೆ
ನನದೇನು..?
ನನಗಿರುವುದೇನು...?
ನೀನೆ ನನ್ನ ನಲಿವು ...
ನೀನೆ ನನ್ನ ನಗುವು...
ನಿನಗಾಗಿ ನಾನು
ನನಗಾಗಿ ನೀನು
ನನ್ನೆದೆಯಲ್ಲಿ ನೀ ನೇಗಿಲು
ನಿನ್ನೆದೆಯಲ್ಲಿ ನಾ ನೆರಳು
ನಾನು ನೀಲಾಕಾಶ
ನೀನಲ್ಲಿರೋ ನಕ್ಷತ್ರ
ನಾ ನಿನಗೆ ನಕ್ಷೆ..
ನೀ ನನಗೆ ನಿರೀಕ್ಷೆ ...

Thursday, October 29, 2009

ಅವಳ ಹೆಸರು

ಅಗ್ನಿಯೂ ಸುಟ್ಟುಹೋಗುವ ಕೋಪ
ಧರಿತ್ರಿಗೂ ಮೀರಿದ ಮೌನ
ಕೊಂಡು ತಂದವಳು
ನನ್ನ ಉಸಿರು
ಗೆಳತಿ ಅವಳ ಹೆಸರು

ಹೂವನು ಮೀರಿದ ಕಂಪು
ಇವಳು ಮಂಜಿಗಿಂತ ತಂಪು
ನನ್ನೆದೆಯ ಮಡುವಿನ ಕಮಲ
ಅರಳಿದಳು ಸೋಕಿಸದೆ ಕೆಸರು
ಮಡದಿ ಅವಳ ಹೆಸರು

ದೀಪದಾರತಿಯ ಬೆಳಕು
ಕಾರಿರುಳ ಕಳೆವ ಹೊಳಪು
ಹೊತ್ತು ಬರುವವಳ
ಮನ ಹಸಿರು
ಹೆಣ್ಣು ಅವಳ ಹೆಸರು

ತೊಡೆದು ಪುರುಷನ ವಿಕೃತಿ
ಕಲಿಸಿ ಬಾಳಿಗೆ ಸಂಸ್ಕೃತಿ
ಸಲಹುವವಳ
ಬದುಕು ಕೆನೆ ಮೊಸರು
ಪ್ರಕೃತಿ ಅವಳ ಹೆಸರು...

Monday, September 21, 2009

ಬಿನ್ನಹ ಮುಗಿಲಿಗೆ

ಮಳೆಯಿಲ್ಲದ ನೆಲದಲ್ಲಿ
ಕನಸಿಗೂ ಬರಗಾಲ
ಜೀವನ ಪರ್ಯಂತ..
ಬಿರುಕಿದ ಇಳೆಯಲ್ಲಿ
ಕುಸಿದು ಬಿದ್ದ ದನಿಯ
ಮೌನ ಪ್ರಾರ್ಥನೆ ..
ಅದರ ಆಸೆ ಜೀವಂತ

ಬಾರದ ಮಳೆಯಿಂದ
ತಂಪಾಗಿಲ್ಲ ಇಳೆ
ಒಡಲು ಖಾಲಿ ಖಾಲಿ
ಒಲುಮೆಯ ಮರದ
ಎಲೆಗಳು ಉದುರಿವೆ
ಮತ್ತೆ ಬಿಕ್ಕಿ ಬಿಕ್ಕಿ
ಬಿರುಗಾಳಿಗೆ ತೇಲಿ

ದೂರದೂರಿಂದ ಮುಗಿಲ
ಸವಾರಿ ಇಲ್ಲೇ ನುಗ್ಗಿದಂತೆ
ಜೀವದ ಕರೆಗೆ
ಛೆ! ನಾಲ್ಕು ಹನಿಯನ್ನೂ
ಚಿಮುಕಿಸದೆ
ಹೊರಟ ವೇಕೋ
ಮತ್ತೆ ತೆರೆಮರೆಗೆ

ಓ ಮುಗಿಲೇ ಮುನಿದೆಹೆ ಏಕೆ
ಬಾರದೆ ನಮ್ಮೀ ನೆಲಕೆ
ಕರಗಿ ಉದುರಲು
ನಿನಗೂ ತೆರಬೇಕೆ ಸುಂಕ ?
ಕರುಣಿಸಿ ಕರಗು
ತಣಿಯಲಿ ಧರೆ
ಎಂದೂ ತೋರದೆ ಬಿಂಕ..

Tuesday, August 25, 2009

ನಿನ್ನೊಡನೆ ಅಂದು


ಸಿಗಬೇಕಿದೆ ಭಾವ ತಂತು
ಮಿಡಿಯಲು ಶ್ರಾವ್ಯ ನಾದ
ಕಾಯುತಿದೆ ನಿನಗಾಗಿ ಕಾದ
ಜೀವವಿದು ಇಲ್ಲೇ ನಿಂತು


ನಿನ್ನ ನಗು ಮೊಗ ನೋಡಿ
ನಾ ಅಂದು ಕಲಿತ ಹೊಸ ರಾಗ
ನಿನ್ನ ನುಡಿಯೆಂಬ ಶ್ರುತಿಯ
ಹುಡುಕಿ ಹೊರಟಿದೆ


ನಿನ್ನ ಕಣ್ಣ ಕಾಡಿಗೆ
ನನ್ನೆದೆಯ ಗೂಡಿಗೆ
ಸೋಕಿ ಹೋದ ಆ ಕ್ಷಣವು
ಇತಿಹಾಸದ ಪುಟದಲ್ಲಿ ಅಮರವಾಗಿದೆ

ನನ್ನ ಗಲ್ಲ ಸವರಿ ಹೋದ
ನಿನ್ನ ತುರುಬಿನ ಮಲ್ಲಿಗೆ
ನಾಚಿ ಕೆಂಪಾದಾಗಲೇ
ಅದರ ಪರಿಮಳ ದುಪ್ಪಟ್ಟಾಯಿತು

ನಿನ್ನ ಸೆರಗಲ್ಲಿ ಗಂಟು ಕಟ್ಟಿದ
ನನ್ನ ಪ್ರೀತಿಯ ಒಗಟನ್ನು
ನೀನು ಬಿಚ್ಚಿ ಬಿಡಿಸಿದ ಕಲೆಯೇ
ನನಗಾದ ಜ್ಞಾನೋದಯ

ಉಸಿರುಸಿರು ಒಂದಾದಾಗಲೇ
ಅರಿತುಕೊಂಡೆ ನೀನನ್ನ ದೇವತೆ
ನೀ ಹಡೆದ ಹೊಸ ಜೀವ
ನಮ್ಮ ಬದುಕಿನ ಕಲರವ

Friday, June 19, 2009

ಮಳೆಯಲ್ಲಿ ನೆಂದು....

ಗೋಧೂಳಿ ಸಮಯ ತುಸು ಜಾರಿ
ಕಾರ್ಗತ್ತಲು ಅರಳುವ ಸಮಯ....
ಭೂ-ಬಾನು ಒಂದಾಗಿ ಮಾಡಲೆಂದೇ
ಬಂದನೇನೋ ಈ ಮಳೆರಾಯ...!
ನೆಂದು ಹೋದೆ
ಆ ಇಳೆಗಿಳಿದ ಮಳೆಗೆ

ಮಿಂದು ಹೋದೆ
ಅದು
ತಂದ ಚಳಿಗೆ
ಅಂದವಿತ್ತು
ಆ ಮಿಂಚು
ಮೋಡಗಳ ನಡುವೆ

ಮಿಂಚಿ ಮರೆಯಾಗುವ ಆ ಅಲ್ಪ ಕ್ಷಣ !
ಜೊತೆಗೆ...
ಎದೆಗೆ ಝಲ್ಲನೆ ಈಟಿ ಹೊಕ್ಕಂತೆ

ಸಿಡಿಲ ನರ್ತನ !
ಈ ನಡುವೆ ಕಾಣದ ಗೆಳತಿಯೋರ್ವಳ
ದೂರವಾಣಿ ಕರೆ!
ಅಸ್ಪಷ್ಟ ದನಿಯೊಂದಿಗೆ
ಉಭಯ ಕುಶಲೋಪರಿ!
ಈಗ ನೆಂದದ್ದು - ಮಿಂದದ್ದು.. ಬರೀ ದೇಹವಲ್ಲ
ಮನಸೂ ಸಹ... !!

Saturday, March 14, 2009

ನಿರ್ಗಮನ!

ನೀ ಕೊಟ್ಟ ಛಡಿ ಏಟಿನ ಗುರುತು
ಮನದಲ್ಲಿ ಮಾಸುವ ಮುನ್ನ
ನೀ ಇಟ್ಟ ಬರೆಗೆ ಹೃದಯ
ತಲ್ಲಣ!
ಹೆಪ್ಪುಗಟ್ಟಿದ ರಕ್ತವೂ
ಅಲ್ಲಿಂದ ಜಿನುಗಲು
ಅಶಕ್ತ !
ಒಡಲಿಗೆ ಇಟ್ಟ ಬೆಂಕಿ
ಆರಿಸಲಾಗದ
ಕಾಡ್ಗಿಚ್ಚು !
ಪಸರಿಸಿ ತನು ಮನದ ತುಂಬೆಲ್ಲಾ
ಉಳಿದದ್ದು ಬರೀ
ಬೂದಿ!
ನೆನಪಿನ ಗೊಂಚಲ
ನೀ ತಿವಿದು ಹೋದ ಸಂಜೆ
ಕಣ್ಣಂಚಿನ ಕಂಬನಿಯೂ ಆಗಿತ್ತು
ಬಿಸಿ!
ಕಲ್ಪನೆಗೂ ಮೀರಿದ್ದ
ಅಭಿಲಾಷೆಗಳ ಬಲೂನು
ಚುಚ್ಚು ಮಾತಿನ ಸೂಜಿಗೆ
ವಿಸ್ಫೋಟ!
ನಮ್ಮ ಕನಸುಗಳ ಮಾರಿಕೊಂಡ
ಆ ರಾತ್ರಿಯ ಕಹಿ ಸಮಯ
ಈಗಲೂ ಬೆಂಬಿಡದೆ ಕಾಡುವ
ದುಃಸ್ವಪ್ನ!
ತಣ್ಣಗೆ ಮಲಗಿದ್ದ ಪ್ರೀತಿಗೆ
ನೀ ಇಟ್ಟ ಕೊಳ್ಳಿ
ಆಗಿ ಹೋಯ್ತು
ಚಿತೆ!
ಅರ್ಧ ಸುಟ್ಟು ಉಳಿದ ಪಳಿಯುಳಿಕೆ
ಎಂದೆಂದೂ ಅಳಿಯದ
ಚಿಂತೆ!

Monday, February 23, 2009

ಆಡೋಣ ಬಾ...

ಓಡೋಣ ಬಾ
ಹಿಮಗಿರಿಯ ತುತ್ತ ತುದಿಗೆ
ಅಲ್ಲಿ ಬೆಳೆಸೋಣ ಬಾ
ನಮ್ಮದೇ ಹೂದೋಟ
ಜಗದ ಹಂಗಿಲ್ಲದೆ
ಆಡೋಣ ಬಾ ಜೂಟಾಟ


ನಿನ್ನ ಕಣ್ಣು ನಾನಾಗೇ
ನನ್ನ ಕಣ್ಣು ನೀನಾಗು
ಹುಡುಕಾಟದಲ್ಲೇ
ಮೀರುವ ಜಗದ ಎಲ್ಲೆ
ಹುರುಪಿನಿಂದ ನಾವು
ಆಡೋಣ ಕಣ್ಣಾ ಮುಚ್ಚಾಲೆ


ಸೃಷ್ಟಿಸೋಣ
ಪ್ರೀತಿಯ ನದಿಯಲ್ಲಿ
ಅನುರಾಗದ ಅಲೆ
ಎಡವದಂತೆ ಆಡೋಣ
ಮನದ ಮೈದಾನದಲ್ಲೇ
ಅನವರತ ಕುಂಟು ಬಿಲ್ಲೆ


ನೆನಪಿರಲಿ...
ಸೋಲಿರಲಿ ಗೆಲುವಿರಲಿ
ಆಟದ ಸ್ಪೂರ್ತಿಯೇ
ಬೇಕು ಬದುಕಿಗೆಲ್ಲಾ
ಫಲಿತಾಂಶ ಯಾಕೆ ಬೇಕು
ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ !

Tuesday, December 16, 2008

ಸರಿತೆ

ಸೊಗಸಾದ ಕಲ್ಪನೆಯಾದೆ
ಮುತ್ತಂಥ ಅಕ್ಷರವಾದೆ
ಮುದ್ದಾದ ಪದವಾದೆ
ಸವಿಯಾದ ಸಾಲಾದೆ
ಎದೆಯ ಪುಟದಲಿ
ಒಲವಿನ ಕವನವಾದೆ

ರಾಗದಲ್ಲಿ ಬೆರೆತೆ
ಸರಾಗವಾಗಿ ಕುಳಿತೆ
ಸಂಗೀತದ ಆಲಾಪವಾಗಿ
ಬರೆದೆ ಹೊಸ ಚರಿತೆ
ನೆನಪ ಸ್ಮೃತಿಯಲಿ
ನೀನಾದೆ ಹರಿವ ಸರಿತೆ

Wednesday, October 01, 2008

ಕಾಗದದ ದೋಣಿ

ಕಾಗದದ ದೋಣಿ ಇದು ...
ನೆನೆಯಬಹುದು
ಮುಳುಗಲಾರದು
ಈಗಲೋ ಆಗಲೋ
ಹರಿಯಬಹುದು
ಕೊಂಚವಾದರೂ
ತೇಲದೆ ಇರದು


ಕಾಗದದ ದೋಣಿ ಇದು ...
ಬಹಳ ಚಿಕ್ಕದು
ಕಡಿಮೆ ಬೆಲೆಯದ್ದು
ಇದ ಮಾಡಿದ
ಮನದ ಮುಗ್ಧತೆಯದು
ಬೆಲೆ ಕಟ್ಟಲಾಗದ್ದು


ಕಾಗದದ ದೋಣಿ ಇದು ...
ಬಹು ದೂರ ಸಾಗದು
ನಾವಿಕನಿಲ್ಲ ಇಲ್ಲಿ
ಗುರಿ ತಲುಪಿಸಲು
ಒಬ್ಬಂಟಿ ಯಾನಿ ಇದು
ಗುರಿ ಮುಟ್ಟದೆ
ಅಳಿಯಲೂ ಬಹುದು


ಕಾಗದದ ದೋಣಿ ಇದು ...
ಸಾಟಿಯಲ್ಲ ಹಡಗಿಗೆ
ಇದು ಎಂದೆಂದೂ
ಮುಟ್ಟಲಿಲ್ಲ ಕಡಲಿಗೆ
ನಿಶ್ಚಲ ನೀರೆ ಪರಿಧಿ
ಅದರೊಳಗೇ ಇದು ಬಂಧಿ

Monday, June 02, 2008

ನೀ ನನ್ನ ಪಾಲಿಗೆ

ಈ ಹೃದಯ ಪಿಸುಗುಟ್ಟಲು
ಮೌನ ಮಾತಾಯಿತು
ನಿನ್ನ ನೆನಪು ಮನ ಸೇರಲು
ದುಃಖ ಬರಿದಾಯಿತು

ನಿನ್ನ ಕಾಣುವ ಹಂಬಲಕೆ
ಹಗಲು ಹರಿಸಿತು ಸೆಳೆಮಿಂಚು
ನಿನ್ನ ಸೆಳೆವ ಉಪಾಯಕೆ
ಕತ್ತಲು ಕಟ್ಟಿತು ಒಳಸಂಚು

ಸುಳಿಯು ಸುಳಿದಾಡದು
ನೀ ನಿಂತ ಮನದ ಮಡುವಲ್ಲಿ
ಅಳಿವಿಲ್ಲ ನನಗೆ ಇದ್ದಷ್ಟು ದಿನ
ನಿನ್ನಾಸರೆಯ ಮಡಿಲಲ್ಲಿ

ನಲುಮೆಯ ಬದುಕಿದು ಒಗಟು
ಬಿಡಿಸು ಬಾ ಈ ಕಗ್ಗಂಟು
ಕಾರಿರುಳ ಕಾನನವು ಕತ್ತಲ ಕೂಪ
ಬೆಳಗಿಸೆ ಇರುಳ ಹೊತ್ತಿಸು ಒಲವಿನ ದೀಪ

ನಸುಗಂಪು ಹೂ ಸೂಸಿದೆ
ಈ ಕಲ್ಪನೆಯೇ ಹೊಸದಾಗಿದೆ
ಪ್ರತೀ ಕಲ್ಪನೆ ನಿನ್ನ ನೆನಪಂತಿದೆ
ಆ ನೆನಪೇ ಹಸಿರಾಗಿದೆ

ದಾಟಿ ಬಾ ಸಪ್ತ ಶರಧಿಗಳ
ಮೀಟಿ ಬಾ ಸುಪ್ತ ಭಾವಗಳ
ಕನಸು ನನಸಾಗುವ ಘಳಿಗೆಗೆ
ಸೇರಿ ಬಿಡು ನೀ ನನ್ನ ಪಾಲಿಗೆ

Tuesday, April 22, 2008

ಹಕ್ಕಿಯ ಗೂಡು

ಹಕ್ಕಿಯ ಗೂಡು
ಹೇಗಿದೆ ನೋಡು
ಪುಟ್ಟ ಮರಿಗಳ
ತನ್ನೋಡಲಲ್ಲಿ
ಸಲಹುತ
ನಗುವುದು ನೋಡಲ್ಲಿ


ಹಾರದ ಮರಿಗಳ
ಬೀಳಿಸದೆ
ತಾಯಿಯ ನಂಬಿಕೆ
ಹುಸಿಮಾಡದೆ
ಕಾಲವ ಕಳೆವುದು
ಚಿಂತಿಸದೆ


ರೆಕ್ಕೆ ಬಲಿತ ಹಕ್ಕಿ
ಪುರ್ರನೆ ಹಾರಿ
ಗೂಡಿನ ಪ್ರೀತಿಯ
ಗಾಳಿಗೆ ತೂರಿ
ಮೇಲೆರುವುದು
ಗೂಡಿನ ಕೈ ಜಾರಿ


ನಗುತ ತೋರುತ ಸ್ವಾಗತ
ಹೊಸ ಮರಿಗಳಿಗೆ
ಆಶ್ರಯವಾಗಿ
ಅದುವೇ ಪ್ರೀತಿಯ ತೋರುತ
ಹಾಗೆ ಇರುವುದು
ಬೆಚ್ಚನೆ ಗೂಡಾಗಿ

Saturday, March 29, 2008

ನಗು

ಸಿಗಬಹುದು ಚಿಂತೆಯ

ಸಂತೆಯಲ್ಲೂ ನಗುವೆಂಬ

ಗುಳಿಗೆ

ದೂರವಿಲ್ಲ ಆ ನಗುವು

ನಮ್ಮದಾಗುವ

ಘಳಿಗೆ



ಹಣ್ಣೆಲೆ ಉದುರಿದ ಮೇಲೆ

ಚಿಗುರದೆ ಇರದು

ಚಿಗುರೆಲೆ

ದುಗುಡ ದೂರವಿಟ್ಟು

ಮತ್ತೆ ನಗುವ

ಈಗಲೇ

.

ನಕ್ಕು ನಗಿಸಿ

ನಗುವವರ ಮುಖದಲಿ

ನಗುವಾಗುವ

ಮರೆಯಿಸೆ ದುಃಖ

ಮನತಣಿಸುವ

ಹಾಡಾಗುವ

Sunday, March 23, 2008

ಹೀಗೊಂದು ನೋವು

ನಿನಗೆ ......
ಬರಿದಾಗದು
ಹೃದಯದ ಕೊಳ
ಮೊಗೆದಷ್ಟು ಪ್ರೀತಿ....
ಸಿಹಿ ನೀರ ಸವಿಯುವ
ಭಾಗ್ಯ ನಿರಂತರ...


ನನಗೆ......
ಕೈಗೆಟುಗದು
ಇಲ್ಲೇ ಇರುವ
ಪ್ರೀತಿ ಮರದ ಫಲ...
ಕಹಿ ನೆನಪಲ್ಲಿ ಮೀಯುವ
ಪಾಪ ನಿರಂತರ....


ನಿನಗಾಗಿ.....
ಮೀಸಲಿದೆ
ಹಸಿ ಪ್ರೀತಿ
ಬೆಚ್ಚನೆ ಆಸರೆ
ಕಣ್ ಗಾವಲಿನಲ್ಲಿ
ನೀ ನನ್ನ ಕೈ ಸೆರೆ...


ನನಗೇಕೆ.....
ಬೇಡದ
ಹುಸಿ ಪ್ರೀತಿ
ಅಣಕಿನ ಕೇಕೆ
ಒಲವಿನ ಬೇಲಿ ಇಲ್ಲದೆ
ಬಿರುಕು ನೆಲದಲ್ಲಿ ನಾ ಸೆರೆ...


ಹೀಗೇಕೆ ನೀನು .....
ಸುಮ್ಮನಾದೆ....
ಮಾತಿಗೆ ಸಿಗದೆ
ದೂರವಾದ ಬೆಳಕಂತೆ
ಬಾರದ ಮಳೆಯಂತೆ
ಮೌನದಿ ಕುಳಿತೆ...


ಆದರೂ ನಾನು...
ನಿರೀಕ್ಷಿಸುತ ನಿಂತೆ
ಸುಮ್ಮನಾಗದೆ
ಬೆಳಕಿಗಾಗಿ ಕೂತ ಕತ್ತಲಂತೆ
ಮಳೆಗಾಗಿ ಕಾದ ಧರೆಯಂತೆ
ಬರೆಯುತ ಕವಿತೆ.....